21/06/2023
ಮಾನ್ಯ ವರದಿಗಾರರು/ಸಂಪಾದಕರು
::::ಪತ್ರಿಕಾ ಪ್ರಕಟಣೆ ಕೃಪೆಗಾಗಿ :::::
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ೪೦ ಸಾವಿರಕ್ಕೂ ಹೆಚ್ಚು ಭೋಗಸ್ ಮತದಾನವಾಗಿದೆ. ಅನಧಿಕೃತವಾಗಿ ಮತದಾರರ ಪಟ್ಟಿಯಲ್ಲಿ ವಿಜಯಪುರ ನಗರ ಶಾಸಕರು ತಮ್ಮ ಪ್ರಭಾವ ಬಳಸಿ ಹೊರ ಜಿಲ್ಲೆಯವರ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ. ಈ ಬಗ್ಗೆ ಲಿಖಿತ ದೂರು ನೀಡಿದರೂ ಸಹ ಜಿಲ್ಲಾ ಚುನಾವಣಾಧಿಕಾರಿಗಳು, ಆರ್.ಓಗಳು ಯಾವ ರೀತಿಯ ಕ್ರಮ ಜರುಗಿಸಿಲ್ಲ. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಈ ಪ್ರಕರಣದ ತನಿಖೆಗಾಗಿ ಈಗಾಗಲೇ ಮಾನ್ಯ ಲೋಕಾಯುಕ್ತರಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ((ಕೇಸ್ ನಂ. ಉಪಲೋಕಾಯುಕ್ತ/ಬಿಜಿಎಂ೩೪೭೦-೨೦೨೩) ಸಲ್ಲಿಸಲಾಗಿದೆ ಎಂದು ದೂರು ನೀಡಿರುವ ವಿಜಯಪುರ ನಗರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಇನಾಯತ್ ರೋಜೆವಾಲೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚಿಂಚೋಳಿ, ನಾಗಠಾಣ, ಸೇಡಂ ಹೀಗೆ ಅನೇಕ ಈ ಭಾಗದವರೇ ಅಲ್ಲದ ಮತದಾರರ ಹೆಸರುಗಳು ಸೇರ್ಪಡೆಗೊಂಡಿವೆ. ವಿಜಯಪುರ ನಗರ ಶಾಸಕರ ನೇತೃತ್ವದಲ್ಲಿ ಚಿಂಚೋಳಿಯಲ್ಲಿರುವ ಸಕ್ಕರೆ ಕಾರ್ಖಾನೆ, ಶೀತಲಿಕರಣ ಘಟಕಗಳು, ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಹೀಗೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನೇ ಇಲ್ಲಿಗೆ ತಂದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ನಾಗಠಾಣ ಮತಕ್ಷೇತ್ರದಲ್ಲಿರುವ ಸಾವಿರಾರು ಸಂಖ್ಯೆಯ ಮತದಾರರನ್ನು ನಗರ ಮತಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ. ಯಾವ ರೀತಿಯ ದಾಖಲೆಗಳಿಲ್ಲದೇ ಈ ರೀತಿ ಅವೈಜ್ಞಾನಿಕವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
ಅಸಂಬದ್ಧವಾಗಿ ವಿಜಯಪುರ ನಗರ ಮತಕ್ಷೇತ್ರಕ್ಕೆ ಮತದಾರರ ಸೇರ್ಪಡೆಯಾಗುತ್ತಿರುವುದಕ್ಕೆ ಈ ಹಿಂದೆಯೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಸಂಬAಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಲಿಖಿತ ಆಕ್ಷೇಪಣೆ ಸಲ್ಲಿಸಿ ಡಿಲೀಟ್ ಮಾಡಿ ಎಂದು ಹೇಳಿದರೂ ಯಾವ ಕ್ರಮವೂ ಜರುಗಿಸಲಿಲ್ಲ. ಚುನಾವಣೆಯ ದಿನ ನಾವೇ ಈ ರೀತಿಯ ಅಕ್ರಮವೆಸಗಲು ಬಂದ ತಂಡಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ, ಸಾವಿರಾರು ಸಂಖ್ಯೆಯಲ್ಲಿ ಖೊಟ್ಟಿ ಮತದಾಣ ನಡೆದಿರುವುದು ಖಾತ್ರಿಯಾಗಿದೆ. ವಿಜಯಪುರ ನಗರ ಶಾಸಕರು ತಮ್ಮ ಪ್ರಭಾವ ಬಳಸಿ ಈ ರೀತಿಯ ಕೃತ್ಯವೆಸಗಿದ್ದಾರೆ. ಈ ಅಕ್ರಮದಲ್ಲಿ ಶಾಮೀಲಾದ ಎಲ್ಲರ ಮೇಲೆಯೂ ತನಿಖೆಯಾಗಬೇಕು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಉಪವಿಭಾಗಾಧಿಕಾರಿ ಶ್ರೀ ಕ್ಯಾ.ಮಹೇಶ ಮಾಲಗತ್ತಿ, ತಹಶೀಲ್ದಾರ ಶ್ರೀ ಮಾಂಜ್ರೆ ಸೇರಿದಂತೆ ೩೮ ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಪೂರಕವಾದ ಎಲ್ಲ ದಾಖಲೆಗಳನ್ನು ಮಾನ್ಯ ಲೋಕಾಯುಕ್ತರ ಸನ್ನಿಧಿಗೆ ಸಲ್ಲಿಸಲಾಗಿದೆ.
ಈ ರೀತಿ ಅಕ್ರಮವಾಗಿ ಮತದಾರರ ಹೆಸರು ಸೇರ್ಪಡೆ ಮಾಡುವುದು, ನಂತರ ಡಿಲೀಟ್ ಮಾಡಿಸುವುದು ಕೆಟ್ಟ ಪರಂಪರೆಗೆ ಹಾಗೂ ಪ್ರಜಾಪ್ರಭುತ್ವದ ಭವ್ಯ ಪರಂಪರೆಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ಹೀಗಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಆಗಬೇಕಾದ ಅವಶ್ಯಕತೆ ಇದೆ.