09/08/2020
ಪರೀಕ್ಷೆಯ ಫಲಿತಾಂಶ,ಬದುಕನ್ನು ನಿರ್ಣಯಿಸುವ ದಿನವಾಗದಿರಲಿ..!!
ಶೈಕ್ಷಣಿಕ ವರ್ಷವು ಕೊನೆಗೊಂಡು ಇನ್ನೇನು ಮುಂದಿನ ಶೈಕ್ಷಣಿಕ ಜೀವನದ ಕನಸು ಕಾಣುವ ಬಹುತೇಕ ವಿದ್ಯಾರ್ಥಿ ಸಹೋದರ,ಸಹೋದರಿಯರು ಒಂದು ಕಡೆಯಾದರೆ, ಯಾವ ಕೊರೊನಕ್ಕೂ ಭಯ ಪಡದೆ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯನ್ನು ಬರೆದಂತಹ ಸಾವಿರಾರು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಆದರೆ ಇಂದು ಪರೀಕ್ಷಾ ಫಲಿತಾಂಶವನ್ನು ಯುವ ಮನಸ್ಸುಗಳು ಬದುಕನ್ನು ನಿರ್ಣಯಿಸುವ ದಿನವಂತೆ ಬದಲಾಯಿಸಿಬಿಟ್ಟಿರುವುದು ನಿಜಕ್ಕೂ ದುರಂತ..!!
ಪರೀಕ್ಷಾ ಫಲಿತಾಂಶದ ಇನ್ನೇನು ಹತ್ತಿರವಾಗುವ ಮುನ್ನವೇ ದಿನಪತ್ರಿಕೆಗಳಲ್ಲಿ ಪರೀಕ್ಷಾ ಫಲಿತಾಂಶದ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಅನ್ನುವಂತಹ ತಲೆಬರಹವನ್ನು ನಮಗೆ ವರ್ಷದಿಂದ ವರ್ಷಕ್ಕೆ ಅಧಿಕವಾಗಿ ಕಾಣಿಸಲು ಸಾಧ್ಯವಾಗುತ್ತದೆ.ಅದೆಷ್ಟೋ ಚಿಗುರೊಡೆಯಬೇಕಾದ ಯುವ ಮನಸ್ಸುಗಳು ತಮ್ಮ ಬಾಳನ್ನು ಅನ್ಯಾಯವಾಗಿ ಸಾಯಿಸುವಂತಹ ಘಟನೆಗಳು ಮರುಕಳಿಸುತ್ತಲೇ ಇದೆ.ಪರೀಕ್ಷಾ ಫಲಿತಾಂಶವು ಬದುಕನ್ನು ನಿರ್ಣಯಿಸುವ ಫಲಿತಾಂಶ ಅಲ್ಲ ಅನ್ನುವುದನ್ನು ಯುವಮನಸ್ಸುಗಳಿಗೆ ಅರ್ಥೈಸುವಂತಹ ಪ್ರಯತ್ನ ನಡೆಯಬೇಕಿದೆ.ತಾವು ಕಷ್ಟಪಟ್ಟು ಓದಿ ಬರೆದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೂ, ಅದೇ ವಿಷಯಗಳಲ್ಲಿ ಮತ್ತೆ ಓದಿ ಬರೆಯಲು ಹಲವಾರು ಅವಕಾಶಗಳು ಮತ್ತೆಯೂ ತೆರೆದಿರುತ್ತದೆ.ಆದರೆ ತಮ್ಮ ಅತ್ಯಮೂಲ್ಯವಾದ ಜೀವನವನ್ನು ಸಾಯಿಸಿದರೆ, ಮತ್ತೆ ನಿಮಗೆ ಕನಿಷ್ಟ ಪಕ್ಷ ಚಿಂತಿಸಲೂ ಅವಕಾಶವಿರುವುದಿಲ್ಲ ಅನ್ನುವ ವಾಸ್ತವ ಸತ್ಯವನ್ನು ಮರೆಯಬಾರದು.
ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಕುರಿತಾದ ನಿಶ್ಚಲವಾದ ಗುರಿಯಿಲ್ಲದಿದ್ದರೂ, ತಮ್ಮ ಹೆತ್ತವರಿಗೋಸ್ಕರ ಕಲಿಯುವವರಿದ್ದಾರೆ.ಹಾಗಿರುವಾಗ ನಿಮ್ಮ ಮಕ್ಕಳ ಮನದಲ್ಲಿ ಸಹಜವಾಗಿ ಫಲಿತಾಂಶದ ದಿನ ಒಂದು ರೀತಿಯ ಭಯ ಆವರಿಸಿರುತ್ತದೆ.ಒಂದು ವೇಳೆ ನಾನು ತೇರ್ಗಡೆಯಾಗದೇ ಹೋದರೆ ಮನೆಯಲ್ಲಿ ನನ್ನನ್ನು ಏನು ಮಾಡುವರೋ ಅನ್ನುವ ಚಿಂತೆಯಿಂದ ಕೆಲವರು ಮನೆಬಿಟ್ಟು ಹೋದರೆ, ಇನ್ನು ಕೆಲವರು ಆತ್ಮಹತ್ಯೆಯಂತಹ ನೀಚ ಕಾರ್ಯಗಳಿಗೆ ಇಳಿದು ತಮ್ಮ ಜೀವವನ್ನೇ ಕೊನೆಗಾನಿಸುತ್ತಾರೆ.
ಕೆಲ ಹೆತ್ತಂದಿರು ತಮ್ಮ ಮಕ್ಕಳು ತೇರ್ಗಡೆ ಹೊಂದದೆ ಹೋದರೆ ನಮ್ಮ ಪ್ರತಿಷ್ಠೆಗೆ ಎಲ್ಲಿ ತೊಡಕಾಗಬಹುದೋ ಅಂದುಕೊಂಡು ಮಕ್ಕಳನ್ನು ಪರೀಕ್ಷಾ ಸಮಯದಲ್ಲೇ ಗದರಿಸಲು ಪ್ರಾರಂಭಿಸುತ್ತಾರೆ,ಇದು ಮಕ್ಕಳ ಭವಿಷ್ಯದ ಮೇಲೆ ಮಾರಕವಾದ ಪರಿಣಾಮವನ್ನು ಬೀರುವಂತಾಗಲು ಸಾಧ್ಯವಾಗುತ್ತದೆ.ತಮ್ಮ ಮಕ್ಕಳಿಗೆ ಭಯವನ್ನು ಸೃಷ್ಟಿಸಿ ಕಲಿಸುವ ಬದಲು ಮಕ್ಕಳಿಗೆ ಪ್ರೀತಿಯಿಂದ ಅವರ ಜವಾಬ್ದಾರಿಕೆ,ಅವರ ಬದುಕಿನ ಗುರಿಯ ಬಗ್ಗೆ ತಿಳಿಸಿಕೊಡಬೇಕಾಗಿದೆ.
ನೀವು ಬೆಳೆಸಿದ ಅಡಿಕೆ ತೋಟದಲ್ಲಿ ಅಡಿಕೆಯ ಫಸಲು ಬಾರದೇ ಹೋದರೆ ಅದನ್ನು ಕಡಿಯದೆ, ಅದಕ್ಕೆ ಇನ್ನಷ್ಟು ಗೊಬ್ಬರ,ನೀರು ಹಾಕಿ ಫಸಲು ಬರುವಂತೆ ಯಾವ ರೀತಿ ಪ್ರಯತ್ನಿಸುತ್ತೀರೋ ಅದೇ ರೀತಿ ನಿಮ್ಮ ಮಕ್ಕಳನ್ನು ಬೆಳೆಸುವಂತವರಾಗಿ.
ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಬುದ್ಧಿ,ನೆನಪಿನ ಶಕ್ತಿ ಇರಬೇಕಿಂದಿಲ್ಲ.ಕೆಲವರು ವಿಶಿಷ್ಟ ಬುದ್ಧಿಯಿಂದ ಗುರುತಿಸಲ್ಪಟ್ಟರೂ,ಇನ್ನು ಕೆಲವರಿಗೆ ಅದೆಷ್ಟು ಓದಿದರೂ ತಲೆಗೆ ಹತ್ತಲು ಕಷ್ಟವಾದೀತು.ಹಾಗಿರುವಾಗ ಮಕ್ಕಳು ಅದೆಷ್ಟೇ ಓದಿದರೂ ಕೆಲವೊಮ್ಮೆ ಪರೀಕ್ಷೆಯ ಫಲಿತಾಂಶವು ಅವರಿಗೆ ಪೂರಕವಾಗಿ ಬರಲು ಕಷ್ಟಪಡಬೇಕಾದೀತು.
ನಿಮ್ಮ ಮಕ್ಕಳ ಪೈಕಿ ಯಾರಾದರು ಒಬ್ಬರು ಅನುತ್ತೀರ್ಣಗೊಂಡರೂ,ಉತ್ತೀರ್ಣಗೊಂಡವರ ಮುಂದೆ ಅವರನ್ನು ಪರಿಹಾಸ್ಯ ಮಾಡದಿರಿ.ನಿಮ್ಮ ಕೆಲವೊಂದು ಮಾತುಗಳು ಅವರ ಮಾನಸಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡೀತು.ಅವರಿಗೆ ಇನ್ನಷ್ಟು ಧೈರ್ಯವನ್ನು ತುಂಬಿ ಬದುಕಿನ ಗುರಿಯ ಬಗ್ಗೆ ಅರ್ಥೈಸಿ ಕೊಡುವಂತವರಾಗಿ.
ಆತ್ಮೀಯ ವಿದ್ಯಾರ್ಥಿ ಮಿತ್ರರೇ..
ಮುಂಬರುವ ಪರೀಕ್ಷಾ ಫಲಿತಾಂಶವು ನಿಮಗೆ ಪೂರಕವಾಗಿ ಬಾರದಿದ್ದರೆ ದೃತಿಗೆಢದಿರಿ.ಒಮ್ಮೆ ಸೋಲಾದರೆ ಇನ್ನೂ ಹಲವಾರು ಅವಕಾಶಗಳು ನಿಮಗಾಗಿ ತೆರೆದಿರುತ್ತದೆ.ದೇಶ ಕಂಡ ಹೆಸರಾಂತ ಹಲವು ನಾಯಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿದವರು ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳದೇ ಇರುವವರು ಅನ್ನುವ ವಾಸ್ತವ ಸತ್ಯವನ್ನು ಮರೆಯದಿರಿ.ಸಾಧನೆ ಮಾಡಲು ಸಾಧಿಸುವ ಛಲವೊಂದಿದ್ದರೆ ಸಾಕು, ಅದೇನನ್ನು ಬೇಕಾದರೂ ಸಾಧಿಸಲು ಸಾಧ್ಯವಿದೆ. ಪರೀಕ್ಷಾ ಫಲಿತಾಂಶವು ನಿಮಗೆ ಪೂರಕವಾಗಿ ಬರಲಿ ಅನ್ನುವ ಶುಭಹಾರೈಕೆಯೊಂದಿಗೆ..
📝ಸddu